ಸಮುದ್ರ ತನ್ನ ಒಡಲಲ್ಲಿ ಅದೆಂಥ ಸಂಪತ್ತನ್ನು ಹುದುಗಿಸಿಕೊಂಡಿದೆ, ಅದನ್ನೇ ನಂಬಿಕೊಂಡು ಜೀವನ ಕಟ್ಟಿಕೊಂಡಿರುವ ಜನರ ಬದುಕನ್ನು ತೆರೆದಿಡುವ ಕಥೆಯೇ ಮತ್ಸ್ಯಗಂಧ. ಕಡಲ ತೀರದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಹೇಗೆಲ್ಲ ನಡೆಯುತ್ತದೆ, ಇದರ ಹಿಂದೆ ಯರ್ಯಾರೆಲ್ಲ ಇರುತ್ತಾರೆ. ಅವರು ಸುತ್ತಮುತ್ತಲ ಹಳ್ಳಿಗಳ ಅಮಾಯಕ ಮೀನುಗಾರರನ್ನು ತಮ್ಮ ಕೆಲಸಕ್ಕೆ ಯಾವರೀತಿ ಬಳಸಿಕೊಳ್ಳುತ್ತಾರೆ, ರಾಜಕಾರಣಿಗಳು ಪೊಲೀಸರನ್ನು, ಹೇಗೆ ತಮ್ಮ ಹತೋಟಿಯಲ್ಲಿಟ್ಟುಕೊಂಡಿರುತ್ತಾರೆ, ಮುಗ್ಧ ಜನರನ್ನು ಯಾವ ರೀತಿ ನಂಬಿಸಿ ವಂಚಿಸುತ್ತಾರೆ ಎಂಬುದನ್ನು ಕರಾವಳಿ ತೀರದ ಈ ಕಥೆಯಲ್ಲಿ ನಿರ್ದೇಶಕರು ತೆರೆದಿಟ್ಟಿದ್ದಾರೆ.
ಟೋಂಕಾ ಎಂಬ ಹಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ಸುತ್ತ ನಡೆಯುವ ಕಥೆಯಿದು. ಆ ಠಾಣೆಯ ಎಸ್.ಐ. ಪರಮ್(ಪೃಥ್ವಿ ಅಂಬಾರ್) ಹಾಗೂ ಅ ಹಳ್ಳಿಯ ಜನರ ನಡುವೆ ಆಗಾಗ ನಡೆಯೋ ಘರ್ಷಣೆಗಳು, ಎಸ್ಸೈ ಪರಮ್ ಕಾನ್ಸ್ಟೇಬರ್ ಜೊತೆ ರೌಂಡ್ಸ್ ಹೋಗಿದ್ದಾಗ ಕೆಟ್ಟು ನಿಂತಿದ್ದ ಗೂಡ್ಸ್ ಲಾರಿಯೊಂದು ಕಂಡು ಬರುತ್ತದೆ. ಅನುಮಾನಗೊಂಡ ಪರಮ್ ಆ ಗಾಡಿಯನ್ನು ತಪಾಸಣೆ ಮಾಡಿದಾಗ ಮೇಲ್ಭಾಗದಲ್ಲಿ ಮಾತ್ರ ಮೀನುಗಳ ಬಾಕ್ಸ್ ಇದ್ದರೆ, ಅದರ ಕೆಳಗೆ ಕೋಟ್ಯಾಂತರ ಬೆಲೆಬಾಳುವ ಗಾಂಜಾ ಸೊಪ್ಪಿನ ಬಾಕ್ಸ್ ಗಳಿರುತ್ತವೆ. ಲಾರಿಯ ಚಾಲಕನಿಗೆ ಯಾರೋ ಒಬ್ಬರು ಮಂಗಳೂರು ಬಂದರಿಗೆ ಈ ಬಾಕ್ಸ್ಗಳನ್ನು ತಲುಪಿಸಲು ಕಳಿಸಿರುವುದು ಗೊತ್ತಾಗುತ್ತದೆ. ಆಗ ಪರಮ್ಗೆ ಆ ಮಾಲನ್ನು ತಾವೇ ಇಟ್ಟುಕೊಂಡರೆ ಕೊಟ್ಯಾಂತರ ಹಣ ಗಳಿಸಬಹುದೆಂಬ ದುರಾಸೆ ಹುಟ್ಟುತ್ತದೆ.
ಕಾನ್ಸ್ ಟೇಬಲ್ ಜೊತೆಸೇರಿ ಅದನ್ನು ಹೇಗೆ ಸಾಗಿಸುವುದೆಂದು ಪ್ಲಾನ್ ಮಾಡುತ್ತಾರೆ. ಇನ್ನೊಂದೆಡೆ ತಾನು ಕಳಿಸಿದ ಮಾಲು ಸೇರಬೇಕಾದ ಸ್ಥಳ ತಲುಪದೆ ಪೊಲೀಸರ ಕೈಗೆ ಸಿಕ್ಕಿರುವುದು ಜಾಯಿಂಟ್ ರವಿಗೆ(ಭಜರಂಗಿ ಲೋಕಿ) ಗೊತ್ತಾಗುತ್ತದೆ. ಆ ಮಾಲನ್ನು ಪೊಲೀಸರು ಮುಚ್ಚಿಟ್ಟಿರುವುದೂ ತಿಳಿಯುತ್ತದೆ, ಪರಮ್ ಆ ಮಾಲನ್ನು ಸೇಲ್ ಮಾಡಲು, ಆ ವ್ಯವಹಾರ ಮಾಡಿಕೊಡುವ ಡ್ರಗ್ ಪೆಡ್ಲರ್ ಒಬ್ಬನನ್ನು ಹುಡುಕಿ ಆತನಿಗೆ ಮಾಲನ್ನು ಮರಾಟ ಮಾಡಿಕೊಡುವಂತೆ ಹೇಳುತ್ತಾನೆ, ಆತ ಜಾಯಿಂಟ್ ರವಿ ಕಡೆಯವನು, ಪೊಲೀಸರು ತನ್ನ ಮಾಲನ್ನು ತನಗೇ ಮಾರಲು ಬರುತ್ತಿರುವುದು ಆತನಿಂದ ಗೊತ್ತಾಗುತ್ತದೆ. ರವಿ ಸಲಹೆಯಂತೆ ಆ ಡ್ರಗ್ ಪೆಡ್ಲರ್ ಮಾಲನ್ನು ತೆಗೆದುಕೊಂಡು ಒಂದು ಜಾಗಕ್ಕೆ ಬರುವಂತೆ ಪರಂಗೆ ತಿಳಿಸುತ್ತಾನೆ, ಪರಂ ತನ್ನ ಕಾನ್ಸ್ಟೇಬಲ್ ಜೊತೆಗೆ ಅಲ್ಲಿಗೆ ಬಂದಾಗ ಅವರಿಗೆ ಮತ್ತು ಬರುವ ಚಾಕೊಲೆಟ್ ತಿನಿಸಿ, ಮಾಲನ್ನು ಲಪಟಾಯಿಸುತ್ತಾರೆ, ಆದರೆ ಅಷ್ಟು ದೊಡ್ಡ ಮಾಲನ್ನು ಎಸ್ಸೈ ಪರಂ ಪತ್ತೆ ಹಚ್ಚಿರುವುದು ಅದ್ಹೇಗೋ ಮೇಲಾಧಿಕಾರಿಗಳಿಗೆ ಗೊತ್ತಾಗಿಬಿಡುತ್ತದೆ, ಆದರಾಗಲೇ ಮಾಲು ಕಳುವಾಗಿರುತ್ತದೆ, ಮುಂದೆ ಕಳುವಾಗಿದ್ದ ಗಾಂಜಾವನ್ನು ವಶಪಡಿಸಿಕೊಳ್ಳಲು ಪೊಲೀಸರು ಏನೆಲ್ಲ ಸಾಹಸ ಮಾಡಿದರು, ಆ ನಡುವೆ ಮತ್ತಿನ್ಯಾವ ರೌಡಿ ಎಂಟ್ರಿ ಕೊಡುತ್ತಾನೆ, ಎಲ್ಲದಕ್ಕೂ ಚಿತ್ರದ ಕೊನೆಯಲ್ಲಿ ಸ್ಪಷ್ಟನೆ ಸಿಗುತ್ತದೆ, ನಿರ್ದೇಶಕ ದೇವರಾಜ್ ಪೂಜಾರಿ ಕೊನೆಯ ದೃಶ್ಯದವರೆಗೆ ಕುತೂಹಲಕರವಾಗಿ ಚಿತ್ರವನ್ನು ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ, ಮುಖ್ಯವಾಗಿ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಈ ಚಿತ್ರದ ಹೈಲೈಟ್, ಇಡಿ ಚಿತ್ರವನ್ನದು ಕ್ಯಾರಿ ಮಾಡುತ್ತದೆ, ಜೊತೆಗೆ ಹಾಡುಗಳೂ ಸಹ ಉತ್ತಮವಾಗಿ ಮೂಡಿಬಂದಿವೆ, ಪೊಲೀಸ್ ಪಾತ್ರದಲ್ಲಿ ಪೃಥ್ವಿ ಅಂಬಾರ್ ಗಮನ ಸೆಳೆಯುತ್ತಾರೆ. ಮಾಜಿ ಶಾಸಕನ ಅನುಯಾಯಿ ಮೀನುಗಾರ ಉದಯ್ ಪಾತ್ರದಲ್ಲಿ ಪ್ರಶಾಂತ್ ಸಿದ್ದಿ ಉತ್ತಮ ಅಭಿನಯ ನೀಡಿದ್ದಾರೆ, ಶರತ್ ಲೋಹಿತಾಶ್ವ ಅವರ ಬಡಾಸಾಬ್ ಪಾತ್ರ ಕೊನೆಯ ಭಾಗದಲ್ಲಿ ಬಂದರೂ ಕುತೂಹಲ ಮೂಡಿಸುತ್ತದೆ. ಚಿತ್ರದ ಕ್ಯಾಮೆರಾ ವರ್ಕ ಕೂಡ ಚೆನ್ನಾಗಿದೆ.